ರಕ್ತದಾನ ಜೀವದಾನ; ಆರೋಗ್ಯವಂತರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿ – ಡಾ. ಪೃಥ್ವಿ
ಶಿವಮೊಗ್ಗ, ಜೂನ್ 30: ಆರೋಗ್ಯವಾಗಿರುವ ಪ್ರತಿಯೊಬ್ಬರೂ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ಮೆಟ್ರೋ ಆಸ್ಪತ್ರೆಯ ತಜ್ಞ ವೈದ್ಯ ಡಾ. ಪೃಥ್ವಿ ಹೇಳಿದರು.
ನಗರದ ಹೋಟೆಲ್ ಶುಭಂ ಆವರಣದಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದಾನವು ಜೀವದಾನದ ಸಮಾನವಾಗಿದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಒಬ್ಬ ದಾನಿ ನೀಡುವ ಒಂದು ಯೂನಿಟ್ ರಕ್ತವು ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಸೇರಿದಂತೆ ಹಲವು ತುರ್ತು ಪರಿಸ್ಥಿತಿಗಳಲ್ಲಿ ಅಮೂಲ್ಯವಾದ ಜೀವಗಳನ್ನು ಉಳಿಸಲು ನೆರವಾಗುತ್ತದೆ ಎಂದು ತಿಳಿಸಿದರು.
ಇಂದು ರಕ್ತದಾನ ಮಾಡುತ್ತಿರುವ ಪ್ರತಿಯೊಬ್ಬ ದಾನಿಯೂ ಸಮಾಜಕ್ಕೆ ಮಾದರಿಯಾಗಿದ್ದು, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಚಳವಳಿಯಲ್ಲಿ ಪಾಲ್ಗೊಳ್ಳಬೇಕು. ರಕ್ತದಾನಿಗಳ ನಿಸ್ವಾರ್ಥ ಸೇವೆ ಅತ್ಯಂತ ಶ್ಲಾಘನೀಯವಾಗಿದ್ದು, ಆರೋಗ್ಯವಂತರಾದ ಎಲ್ಲರೂ ನಿಯಮಿತವಾಗಿ ರಕ್ತದಾನ ಮಾಡುವ ಸಂಕಲ್ಪ ಮಾಡಬೇಕು. ನಮ್ಮ ಒಂದು ಸಣ್ಣ ಸೇವೆ ಮತ್ತೊಬ್ಬರ ಬದುಕಿಗೆ ದೊಡ್ಡ ಆಶಾಕಿರಣವಾಗಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಶಿವಮೊಗ್ಗ ವಿವೇಕ್ ಅಧ್ಯಕ್ಷೆ ವಿಜಯಲಕ್ಷ್ಮಿ ವಹಿಸಿದ್ದರು. ಈ ಸಂದರ್ಭದಲ್ಲಿ ವಲಯ–24ರ ಜೆಡ್ವಿಪಿ ಜೆಸಿಐ ಸೆನೆಟರ್ ಗಣೇಶ್ ಪೈ, ಜೆಎಸಿ ಜೆವಿಸಿ ಉದಯ್ ಕಡಂಬ, ಜೆಸಿಐ ನೀಡ್ ಬ್ಲಡ್ ಕಾಲ್ ಕೋ-ಆರ್ಡಿನೇಟರ್ ಶಿಲ್ಪ, ಜೆಕಾಂ ಟೇಬಲ್ ಚೇರ್ಮನ್ ಚಂದ್ರಹಾಸ್ ಶೆಟ್ಟಿ, ಜೆಸಿಐ ಬ್ಲಡ್ ಕೋ-ಆರ್ಡಿನೇಟರ್ ಜಯಕುಮಾರ್, ದುರ್ಗಿಗುಡಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಮನೋಜ್ ಕುಮಾರ್, ಕಾಂಗ್ರೆಸ್ ಕಾರ್ಮಿಕ ವಿಭಾಗದ ಮುಖಂಡ ಕೆ. ದೇವೇಂದ್ರಪ್ಪ, ಮುಖಂಡ ಗೋವಿಂದರಾಜ್, ರೆಡ್ ಕ್ರಾಸ್ನ ವೈದ್ಯ ಡಾ. ದಿನಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ