ಶಿವಮೊಗ್ಗ ಜಿಲ್ಲೆಯಾದ್ಯಂತ ಕೆರೆ ಮಣ್ಣು, ಸರ್ಕಾರಿ ಮಣ್ಣು ಮತ್ತು ಮರಳು ಲೂಠಿ? ಅಧಿಕಾರಿಗಳ ಮೌನಕ್ಕೆ ಜನರ ಆಕ್ರೋಶ
ಶಿವಮೊಗ್ಗ, ಮೇ 1: ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆರೆ ಮಣ್ಣು, ಸರ್ಕಾರಿ ಜಮೀನು ಮಣ್ಣು ಮತ್ತು ಮರಳು ಅಕ್ರಮ ಎತ್ತುವಳಿ ನಿರಂತರವಾಗಿ ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಭದ್ರಾವತಿ ತಾಲ್ಲೂಕಿನ ಅಂತರಗಂಗೆ, ಶಿವಮೊಗ್ಗ ತಾಲ್ಲೂಕಿನ ನಾರಾಯಣಪುರ, ಅಗಸವಳ್ಳಿ ಸೇರಿದಂತೆ ಹಲವೆಡೆ ಕೆರೆಗಳ ಮಣ್ಣು ಮತ್ತು ಸಾರ್ವಜನಿಕ ಸಂಪತ್ತಿನ ದೋಚಾಟ ನಡೆಯುತ್ತಿದೆ ಎನ್ನಲಾಗಿದೆ. ಸ್ಥಳೀಯರ ಆರೋಪದ ಪ್ರಕಾರ, ರಾತ್ರಿ–ಹಗಲು ಟ್ರ್ಯಾಕ್ಟರ್ಗಳು ಮತ್ತು ಲಾರಿಗಳ ಮೂಲಕ ಮಣ್ಣು ಸಾಗಾಟ ನಡೆಯುತ್ತಿದ್ದರೂ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿದ್ದಾರೆ.
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಬೇರೆ ಭಾಗಗಳಲ್ಲಿಯೂ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಚಂದ್ರೋದಯ ಪತ್ರಿಕೆ ನಿರಂತರ ವರದಿ ಮಾಡುತ್ತಿದೆ. ತೀರ್ಥಹಳ್ಳಿ ಭಾಗದಲ್ಲಿ ತುಂಗಾ ನದಿಪಾತ್ರದ ಮರಳು ದಂಧೆ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ಅಕ್ರಮ ಮರಳು ಗಣಿಗಾರಿಕೆಯಿಂದ ನದಿಯ ಹರಿವು ಬದಲಾಗುವ ಹಾಗೂ ಅಂತರ್ಜಲ ಮಟ್ಟ ಕುಸಿಯುವ ಆತಂಕ ವ್ಯಕ್ತವಾಗಿದೆ.
ಭದ್ರಾ ನದಿ ತೀರದಲ್ಲಿಯೂ ಅಕ್ರಮ ಮರಳು ಎತ್ತುವಳಿ ನಡೆದಿರುವ ಬಗ್ಗೆ ಹಿಂದಿನ ವರದಿಗಳು ಬೆಳಕಿಗೆ ಬಂದಿದ್ದವು. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ಫೋಟೋಗಳನ್ನು ಹಂಚಿಕೊಂಡು ಅಧಿಕಾರಿಗಳ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದಾರೆ.
ಗ್ರಾಮಸ್ಥರು ಮತ್ತು ರೈತರು ಜಿಲ್ಲಾಡಳಿತ ತಕ್ಷಣ ಡ್ರೋನ್ ಸರ್ವೇ ನಡೆಸಿ ಕೆರೆಗಳ ವ್ಯಾಪ್ತಿ, ಅಕ್ರಮವಾಗಿ ತೆಗೆದ ಮಣ್ಣು ಪ್ರಮಾಣ ಹಾಗೂ ಸರ್ಕಾರಿ ಜಮೀನು ಹಾನಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಪರಿಸರ ಹೋರಾಟಗಾರರ ಪ್ರಕಾರ, ಕೆರೆ ಮಣ್ಣು ಲೂಠಿಯಿಂದ ಮಳೆನೀರು ಸಂಗ್ರಹ ಸಾಮರ್ಥ್ಯ ಕುಗ್ಗಿ, ಕೃಷಿ ಮತ್ತು ಕುಡಿಯುವ ನೀರಿನ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ಜನರ ಬೇಡಿಕೆ:
• ಜಿಲ್ಲಾಡಳಿತದಿಂದ ತಕ್ಷಣ ಡ್ರೋನ್ ಸರ್ವೇ
• ಅಕ್ರಮ ಮಣ್ಣು ಸಾಗಣೆ ವಾಹನಗಳ ವಶಕ್ಕೆ ಪಡೆಯುವುದು
• ಖನಿಜ ಮತ್ತು ಭೂವಿಜ್ಞಾನ ಇಲಾಖೆಯ ವಿಶೇಷ ತನಿಖೆ
• ಸಂಬಂಧಪಟ್ಟ ಅಧಿಕಾರಿಗಳ ಪಾತ್ರದ ಪರಿಶೀಲನೆ
“ಸರ್ಕಾರಿ ಸಂಪತ್ತು ಉಳಿಸಬೇಕಾದ ಅಧಿಕಾರಿಗಳೇ ಮೌನವಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ” ಎಂದು ಸ್ಥಳೀಯರು ಆಕ್ರೋಶ.
.jpg)
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ