ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಬೇಸಿಗೆ ಶಿಬಿರ ಸಹಕಾರಿ
ಶಿವಮೊಗ್ಗ: ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವಲ್ಲಿ ಹಾಗೂ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮುಖ್ಯಸ್ಥೆ , ರಾಜ ಯೋಗಿನಿ ಬ್ರಹ್ಮಕುಮಾರಿ ಸ್ವಾತಿ ಹೇಳಿದರು.
ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಕ್ಕಳಿಗೆ ಆಯೋಜಿಸಿರುವ ವ್ಯಕ್ತಿತ್ವ ವಿಕಸನ ಬೇಸಿಗೆ ಶಿಬಿರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವ್ಯಕ್ತಿತ್ವ ವಿಕಸನ ಶಿಬಿರವು ಮಕ್ಕಳ ವ್ಯಕ್ತಿತ್ವ ಬೆಳವಣಿಗೆ, ನಡವಳಿಕೆ, ಭಾವನೆ ಮತ್ತು ವರ್ತನೆಗಳನ್ನು ರೂಪಿಸುವ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು.
ಆತ್ಮವಿಶ್ವಾಸ, ಭಾವನಾತ್ಮಕ ಬುದ್ಧಿವಂತಿಕೆ, ಸಹಾನುಭೂತಿ ಮತ್ತು ಸಂವಹನ ಕೌಶಲ್ಯಗಳನ್ನು ನಿರ್ಮಿಸುವುದು ಶಿಬಿರದಲ್ಲಿ ಸೇರಿವೆ. ಸುರಕ್ಷಿತ ಬಾಂಧವ್ಯ ಬೆಳೆಸುವುದು, ಸಾಮಾಜಿಕ ಕೌಶಲ್ಯ, ಸಕಾರಾತ್ಮಕ ಬಲವರ್ಧನೆ ಒದಗಿಸುವುದು, ಮುಕ್ತ ಸಂವಹನ ಮತ್ತು ಮುಕ್ತ ಆಟಕ್ಕೆ ಅವಕಾಶ ನೀಡುವುದು ಸೇರಿವೆ ಎಂದು ಹೇಳಿದರು.
ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಶಿಬಿರ ಪೂರಕವಾಗಿದೆ. ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಬೇಸಿಗೆ ಶಿಬಿರದ ಪ್ರಯುಕ್ತ ಮಕ್ಕಳಿಗೆ ಯೋಗ, ಚಿತ್ರಕಲೆ, ನೈತಿಕ ಶಿಕ್ಷಣ, ನೆನಪಿನ ನಿರ್ವಹಣೆ, ಆರೋಗ್ಯ, ಶ್ಲೋಕ ವಚನ ಹಾಗೂ ಇನ್ನಿತರ ವಿಷಯಗಳ ಬಗ್ಗೆ ವ್ಯಕ್ತಿತ್ವ ವಿಕಸನ ಶಿಬಿರ ಏರ್ಪಡಿಸಲಾಗಿದೆ. ಭಾಗವಹಿಸಿದ ಮಕ್ಕಳಿಗೆ ಸರ್ಟಿಫಿಕೇಟ್ ಕೊಡಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸಂಸ್ಥೆಯು ನೀಡುವ ವ್ಯಕ್ತಿತ್ವ ವಿಕಸನ ಶಿಬಿರ ಯೋಗ, ಆಧ್ಯಾತ್ಮಿಕ, ನೀತಿಶಾಸ್ತ್ರ, ಪ್ರಾಯೋಗಿಕ ಮನೋವಿಜ್ಞಾನ, ತತ್ವಶಾಸ್ತ್ರ, ವಿಶ್ವ ಇತಿಹಾಸ ಮತ್ತು ಸಂಸ್ಕೃತಿಯ ಸಾರಾಂಶ, ಸಮಾಜಶಾಸ್ತ್ರ ಮತ್ತು ಹಲವಾರು ಇತರ ವಿಷಯಗಳ ಮಿಶ್ರಣವಾಗಿದೆ. ಈ ಸಂಸ್ಥೆಯು ಪ್ರತಿಯೊಬ್ಬ ಮಕ್ಕಳಲ್ಲಿನ ಆಂತರಿಕ ಪ್ರತಿಭೆಯನ್ನು ಗುರುತಿಸುತ್ತದೆ ಮತ್ತು ತಮ್ಮೊಳಗಿನ ವ್ಯಕ್ತಿತ್ವವನ್ನು ಮರುಶೋಧಿಸಲು ಸಹಾಯ ಮಾಡುತ್ತದೆ ಎಂದರು.
ಅನೇಕ ಪೋಷಕರು, ಶಿಬಿರಾರ್ಥಿಗಳು ಹಾಜರಿದ್ದರು. ರುದ್ರಪ್ಪ ಚೀಲೂರು, ಕಾವ್ಯ, ಈಶ್ವರಿ ವಿಶ್ವವಿದ್ಯಾನಿಲಯದ ಸದಸ್ಯರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ