ಪ್ರತಿ ನಿತ್ಯ ವ್ಯಾಯಾಮ ಮಾಡುವುದರಿಂದ ಸದೃಢ ಆರೋಗ್ಯ
ಶಿವಮೊಗ್ಗ: ಆಪದ್ ಮಿತ್ರ ಸ್ವಯಂ ಸೇವಕರು ದೈಹಿಕವಾಗಿ ಸಧೃಡವಾಗಿರಲು ಏರೋಬಿಕ್ಸ್ ವ್ಯಾಯಾಮ ತುಂಬಾ ಸಹಕಾರಿ ಎಂದು ಏರೋಬಿಕ್ಸ್ ತರಬೇತುದಾರರಾದ ಸುನೀತಾ ಚೇತನ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆ, ಶಿವಮೊಗ್ಗ ಜಿಲ್ಲಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಗ್ನಿ ಮತ್ತು ತುರ್ತು ಸೇವಾ ಇಲಾಖೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಸ್ಕೌಟ್ ಭವನದಲ್ಲಿ ಜಿಲ್ಲೆಯ ವಿವಿಧ ಪ್ರಥಮದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಯುವ ವಿಪತ್ತು ಮಿತ್ರ ತರಬೇತಿಯಲ್ಲಿ ಮಾತನಾಡಿದರು.
ಏರೋಬಿಕ್ಸ್ ವ್ಯಾಯಾಮ ಎಂದರೆ ಆಮ್ಲಜನಕವನ್ನು ಸರಿಯಾಗಿ ಬಳಸುತ್ತ ಹೃದಯ ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುವ ದೈಹಿಕ ಚಟುವಟಿಕೆ. ಇದು ತೂಕ ಇಳಿಕೆ, ಬಲವರ್ಧನೆ ಮತ್ತು ಧೀರ್ಘಕಾಲದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ನಡೆಯುವುದು, ಜಾಗಿಂಗ್, ಈಜು, ಸೈಕ್ಲಿಂಗ್ ಮತ್ತು ಜುಂಬಾ ( ನೃತ್ಯ ) ಜನಪ್ರಿಯ ವ್ಯಾಯಾಮವಾಗಿದೆ ಎಂದು ತಿಳಿಸಿದರು.
ಪ್ರತಿದಿನ 30 ನಿಮಿಷ ಕಾಲ ಮಾಡಿದರೆ ಸದೃಢ ಆರೋಗ್ಯ ಹೊಂದಬಹುದು ಎಂದು ಸಲಹೆ ನೀಡಿದರು. ಶಿಬಿರಾರ್ಥಿಗಳಿಗೆ ಬಿಗಿತ ಮತ್ತು ಸಡಿಲಿಕೆ, ಬಾಗುವಿಕೆ, ಶಾಡೋ ಬಾಕ್ಸಿಂಗ್, ಹೈ ನೀಸ್, ಫ್ರಂಟ್ ಕಿಕ್ಸ್, ಸೈಡ್ ಟೋ ಟಚ್ ಮತ್ತಿತರ ವ್ಯಾಯಾಮ ಮಾಡಿಸಿದರು.
ಕೇಂದ್ರ ಸ್ಥಾನಿಕ ಆಯುಕ್ತ ಜಿ. ವಿಜಯ್ ಕುಮಾರ್, ಸಹಾಯಕ ರಾಜ್ಯ ಸಂಘಟನಾ ಆಯುಕ್ತೆ ಸುಮನಾ ಶೇಖರ್, ಶಿಬಿರದ ಸಂಯೋಜಕ ರಾಜೇಶ್ ವಿ ಅವಲಕ್ಕಿ ಮತ್ತಿತರರು ಹಾಜರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 162 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ