ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಅಗತ್ಯ
ಶಿವಮೊಗ್ಗ: ರಾಜ್ಯದಲ್ಲಿ 2ನೇ ಹಂತದ ನಗರಗಳಲ್ಲಿನ ಕೈಗಾರಿಕಾ ವಸಹಾತು ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕೆಲಸ ಸರ್ಕಾರದ ಮಟ್ಟದಿಂದ ಆಗಬೇಕಿದೆ ಎಂದು ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷೆ ಉಮಾ ರೆಡ್ಡಿ ತಿಳಿಸಿದರು .
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ 2025 ರ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಎಂಎಸ್ ಎಂ ಇ ಗಳಿಗೆ ಇನ್ನು ಹೆಚ್ಚಿನ ಪ್ರಾಮುಖ್ಯತೆ ನೀಡಿ ಪ್ರೋತ್ಸಾಹಿಸಬೇಕಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಅವಕಾಶ ಇದೆ. ಸರ್ಕಾರವು ಇದಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಏಪ್ರಿಲ್ 24ರಿಂದ 26ರವರೆಗೆ ಎಫ್ಕೆಸಿಸಿಐ ವತಿಯಿಂದ ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್ ಹಮ್ಮಿಕೊಳ್ಳಲಾಗುವುದು. ಕೃಷಿ ಮತ್ತು ಆಹಾರ ಕ್ಷೇತ್ರ ಉತ್ತೇಜಿಸಲು ಕಾರ್ಯಕ್ರಮ ಆಯೋಜಿಸಲಾಗುವುದು. ಮೇ 29ರಿಂದ 31ರವರೆಗೆ ಗ್ಲೋಬಲ್ ಎಂಎಸ್ಎಂಇ ಕಾನ್ಕ್ಲೇವ್ ಆಯೋಜಿಸಲಾಗುತ್ತಿದೆ. 400ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಏರ್ಪಡಿಸಲಾಗುತ್ತದೆ. ಇದರಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮತ್ತು ಸಂಘವು ಸಕ್ರಿಯವಾಗಿ ಭಾಗವಹಿಸಿ ಎಂದು ಕರೆ ನೀಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಜಿಲ್ಲೆಯಲ್ಲಿನ ವಾಣಿಜ್ಯ ಮತ್ತು ಕೈಗಾರಿಕಾ ಸಮಸ್ಯೆಗಳಿಗೆ ಪರಿಹಾರ ಕೊಂಡುಕೊಳ್ಳಲು ಹಾಗೂ ಸರ್ಕಾರದ ಮಟ್ಟದಲ್ಲಿ ಕೊಂಡಿಯಾಗಿ ಕೆಲಸ ಮಾಡುತ್ತ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಮಾಜಿ ಅಧ್ಯಕ್ಷರು ನಡೆದ ಹಾದಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.
ನಮ್ಮ ಸಂಘದಲ್ಲಿ ಸಂಸ್ಥಾಪಕ ಅಧ್ಯಕ್ಷರಿಂದ ಹಿಂದಿನ ಅಧ್ಯಕ್ಷರವರೆಗೂ ಪ್ರತಿಯೊಬ್ಬರೂ ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಶ್ರಮ ಮತ್ತು ಸಾಧನೆಯಿಂದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘವು ಹೆಮ್ಮೆರ ವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಎಂ.ಶಂಕರರಾವ್, ಎಸ್.ರುದ್ರೇಗೌಡ, ಕೆ.ವಿ.ವಸಂತ್ಕುಮಾರ್, ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ, ಎಚ್.ಮಹೇಂದ್ರಪ್ಪ, ಡಿ.ಎಸ್.ಅರುಣ್, ಡಿ.ಎಂ.ಶಂಕರಪ್ಪ, ಜೆ.ಆರ್.ವಾಸುದೇವ್ ಹಾಗೂ ಎನ್.ಗೋಪಿನಾಥ್ ಅವರಿಗೆ ಗೌರವಿಸಲಾಯಿತು.
ನ್ಯೂ ಕಿಶನ್ ಹ್ಯಾಂಡಿಕ್ರಾಫ್ಟ್, ಲಕ್ಷ್ಮೀ ಮೆಡಿಕಲ್ಸ್ ಹಾಗೂ ರವಿ ಟ್ರೇಡರ್ಸ್ೆ ಸಂಸ್ಥೆಗಳಿಗೆ 2025ನೇ ಸಾಲಿನ ಹೆಮ್ಮೆಯ ವಾಣಿಜ್ಯೋದ್ಯಮಿ ಪ್ರಶಸ್ತಿ ನೀಡಲಾಯಿತು. ಬಿ.ಆರ್.ಸಂತೋಷ್, ಎಸ್.ಪಿ.ಮಧುಕರ್ ಶೆಟ್ಟಿ, ಎ.ಜಿ.ಪ್ರಕಾಶ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ತೆರಿಗೆ ಸಲಹೆಗಾರ ಯು.ಮಧುಸೂದನ್ ಐತಾಳ್ ಅವರಿಗೆ ವಿಶೇಷ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ಸಂಘದ ನಿರ್ದೇಶಕರು, ಸಂಯೋಜಿತ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರು ಹಾಜರಿದ್ದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ