ಧ್ಯಾನ ಅಭ್ಯಾಸದಿಂದ ಒತ್ತಡಮುಕ್ತ ಜೀವನ ಸಾಧ್ಯ
ಶಿವಮೊಗ್ಗ: ಪ್ರತಿ ದಿನ ಧ್ಯಾನ ಅಭ್ಯಾಸ ಮಾಡುವುದರಿಂದ ಒತ್ತಡ ಕಡಿಮೆ ಮಾಡುತ್ತದೆ. ಮಾನಸಿಕ ನೆಮ್ಮದಿ ಪಡೆಯಲು, ಆಂತರಿಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಶಿವಮೊಗ್ಗ ನಗರದ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಸ್ವಾತಿ ಹೇಳಿದರು.
ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಒತ್ತಡಮುಕ್ತ ಜೀವನಕ್ಕಾಗಿ ಶಿವಯೋಗ ಶಿಬಿರದಲ್ಲಿ ಮಾತನಾಡಿ, ಧ್ಯಾನ ಎಂದರೆ ಮನಸ್ಸಿನ ಏಕಾಗ್ರತೆ, ಶಾಂತತೆ ಆಗಿದ್ದು, ಧ್ಯಾನವು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಆಲೋಚನೆಗಳನ್ನು ನಿಯಂತ್ರಣದಲ್ಲಿ ಇಡುತ್ತದೆ ಎಂದು ತಿಳಿಸಿದರು.
ಧ್ಯಾನವು ಒತ್ತಡ, ಆತಂಕ, ಖಿನ್ನತೆ ಮಾಡಿ ದೈಹಿಕ, ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಧ್ಯಾನವು ದೇಹ ಮತ್ತು ಮನಸ್ಸಿಗೆ ಆಳವಾದ ವಿಶ್ರಾಂತಿ ನೀಡುತ್ತದೆ. ಧನಾತ್ಮಕ ಆಲೋಚನೆ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಶಿಕ್ಷಕಿ ಬೇಬಿ ಷಡಕ್ಷರಿ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಆಲೋಚನೆಗಳ ಮೊತ್ತವೇ ವ್ಯಕ್ತಿತ್ವ. ಈಗಿನ ಒತ್ತಡದ ಜೀವನಶೈಲಿ, ಆಹಾರ ಪದ್ಧತಿ ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಅನಾರೋಗ್ಯ ಆಗಿಸುತ್ತವೆ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ಜೀವನದ ಕಡೆಗೆ ಗಮನ ನೀಡಬೇಕು ಎಂದು ತಿಳಿಸಿದರು.
ಜೆಎನ್ಎನ್ಸಿಇ ಪ್ರಾಧ್ಯಾಪಕ ನಾಗೇಶ್ ಮಾತನಾಡಿ, ಒತ್ತಡಯುತ ಜೀವನಶೈಲಿ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಧನಾತ್ಮಕ ಆಲೋಚನೆಗಳು ಅತ್ಯಂತ ಮುಖ್ಯ. ಸದಾ ಒಳ್ಳೆಯ ಆಲೋಚನೆಗಳನ್ನು ಮಾಡಬೇಕು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಒತ್ತಡಮುಕ್ತ ಜೀವನ ನಡೆಸಲು ಧ್ಯಾನ ಶಿಬಿರಗಳು ಅತ್ಯಂತ ಸಹಕಾರಿಯಾಗುತ್ತವೆ. ಪ್ರತಿ ದಿನ ಸ್ವಲ್ಪ ಸಮಯ ಯೋಗ, ಧ್ಯಾನ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಬಿಂದು ವಿಜಯಕುಮಾರ್, ರುದ್ರಪ್ಪ ಚಿಲೂರ್, ಆರ್ ಮನೋಹರ್, ನಾಗೇಶ್, ಶಿಕ್ಷಕ ಶಿವಣ್ಣಗೌಡ, ಬ್ಯಾಂಕ್ ಮ್ಯಾನೇಜರ್ ಸಿದ್ದು, ವಕೀಲ ವರಲಕ್ಷ್ಮೀ, 45ಕ್ಕೂ ಹೆಚ್ಚು ಶಿಬಿರಾರ್ಥಿಗಳು, ಈಶ್ವರೀಯ ವಿಶ್ವ ವಿದ್ಯಾಲಯದ ಸದಸ್ಯರು ಉಪಸ್ಥಿತರಿದ್ದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ