ಸಂಗೀತ ಕಲಿಯುವುದರಿಂದ ಏಕಾಗ್ರತೆ ವೃದ್ಧಿ
ಶಿವಮೊಗ್ಗ: ಒತ್ತಡದ ಕಾರ್ಯ ಹಾಗೂ ಜೀವನಶೈಲಿಯಿಂದ ಹೊರಬರಲು ಸಂಗೀತ ಆಲಿಸುವಿಕೆ ಮತ್ತು ಕಲಿಕೆಯು ಸಹಕಾರಿಯಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಆರ್.ಮಂಜುನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ಶಿಕ್ಷಕರ ಗಾಯನ ವೇದಿಕೆಯಿಂದ ಆಯೋಜಿಸಿದ್ದ ಗಾಯನ ಸಮ್ಮಿಲನ 1 ಕಾರ್ಯಕ್ರಮದಲ್ಲಿ ಮಾತನಾಡಿ, ಸುಮಧುರವಾದ ಸಂಗೀತ ಆಲಿಸುವಿಕೆಯು ಮನಸ್ಸನ್ನು ಸಂತೋಷಗೊಳಿಸುತ್ತದೆ. ಸಂಗೀತ ಕಲಿಯುವುದರಿಂದ ಏಕಾಗ್ರತೆ ಮತ್ತು ಕ್ರಿಯಾಶೀಲತೆ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಶಿಕ್ಷಕರು ಕಾಲಕಾಲಕ್ಕೆ ಈ ರೀತಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಚಿತ್ರಗೀತೆ, ಭಾವಗೀತೆ ಹಾಗೂ ಜಾನಪದ ಗೀತೆಗಳನ್ನು ಹಾಡಬೇಕು. ಇಂತಹ ಸಾಂಸ್ಕೃತಿಕ ವೇದಿಕೆಗಳು ಅತ್ಯಂತ ಅವಶ್ಯಕ ಎಂದರು.
ರಾಗರಂಜಿನಿ ಟ್ರಸ್ಟ್ ಸ್ವರ ಸಂಯೋಜಕ ಪ್ರಹ್ಲಾದ್ ದೀಕ್ಷಿತ್ ಮಾತನಾಡಿ, ಸಂಗೀತ ಆಸಕ್ತರು ಗುರುಗಳ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಮಾಡಬೇಕು. ಜೀವನ ಸುಂದರಗೊಳಿಸಲು ಸಂಗೀತ ನೆರವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸಂಗೀತ ಆಲಿಸುವುದರಿಂದ ಮನಸ್ಸು ಸಂತಸಗೊಂಡು ಒತ್ತಡಮುಕ್ತರಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಎಸ್.ಆರ್.ಮಂಜುನಾಥ್, ಪ್ರಹ್ಲಾದ್ ದೀಕ್ಷಿತ್ ಹಾಗೂ ಜಿ.ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಶಿವಮೊಗ್ಗ ಶಿಕ್ಷಕರ ಗಾಯನ ವೇದಿಕೆ ಸಂಸ್ಥಾಪಕ, ಆಯೋಜಕರಾದ ಶಿಕ್ಷಕ ಬಿ.ಕುಬೇರ್ ನಾಯ್ಕ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕಿ ಕೆ.ಕೆ.ಶಶಿರೇಖಾ ವಂದನಾರ್ಪಣೆ ನಡೆಸಿಕೊಟ್ಟರು. ರಾಜ್ಯ, ರಾಷ್ಟ್ರಮಟ್ಟದ ಕ್ರೀಡೆ, ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಗೌರವಿಸಲಾಯಿತು. ಶಿಕ್ಷಕಿ ಸುಮಾ ಮತ್ತಿತರರು ಹಾಜರಿದ್ದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ