ನಿರಂತರ ಪರಿಶ್ರಮ, ಏಕಾಗ್ರತೆಯಿಂದ ಸಂಗೀತದಲ್ಲಿ ಸಾಧನೆ
ಶಿವಮೊಗ್ಗ: ನಿರಂತರ ಪರಿಶ್ರಮ ವಹಿಸಿ ಸಂಗೀತ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಸಾಧನೆ ಮಾಡಲು ಸಾಧ್ಯವಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.
ಸಮೀಪದ ಸೋಶಿಯಲ್ ಹರ್ಬರ್ನಲ್ಲಿ ಭಾವಗಾನ ಶಿವಮೊಗ್ಗ ಏರ್ಪಡಿಸಿದ್ದ 9ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವ ಮತ್ತು ಸಂಗೀತ ಸಾಧಕ ಭದ್ರಾವತಿ ವಾಸು ಅವರ 75ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗೀತ ಕಲಿಯಲು ಏಕಾಗ್ರತೆ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ. ಸಾಧಕರು ಯುವಪೀಳಿಗೆಗೆ ಮಾರ್ಗದರ್ಶನ ನೀಡುವ ಮೂಲಕ ಉನ್ನತ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಸಂಗೀತ ಸಾಧಕನ ಸ್ವತ್ತು. ಸಂಗೀತದಿಂದ ಖಿನ್ನತೆ ದೂರವಾಗುವುದರ ಜೊತೆಗೆ ಜೀವನೋತ್ಸವ ಮೂಡುತ್ತದೆ. ಪ್ರತಿಭೆ ಅನಾವರಣಗೊಳ್ಳಲು ಸಹಕಾರಿಯಾಗುತ್ತದೆ. ಭದ್ರಾವತಿ ವಾಸು ಅವರು ತಮ್ಮ ವೃತ್ತಿಯ ಜೊತೆಗೆ ನೂರಾರು ಕಲಾವಿದರಿಗೆ ಸಂಗೀತವನ್ನು ಧಾರೆ ಎರೆಯುವುದರ ಮುಖಾಂತರ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಭಾವಗಾನ ಗೌರವಾಧ್ಯಕ್ಷ ಭದ್ರಾವತಿ ವಾಸು ಮಾತನಾಡಿ, ರಿಯಾಲಿಟಿ ಶೋಗಳಿಂದ ಮಕ್ಕಳ ಮನಸ್ಸು ತುಂಬಾ ಒತ್ತಡದಲ್ಲಿದೆ. ಸರಿಯಾಗಿ ಅಭ್ಯಾಸ ಮಾಡದೆ ಬೇಗಬೇಗನೆ ಕಲಿತು ವೇದಿಕೆಯಲ್ಲಿ ಹಾಡಿ ಹೆಸರು ಮಾಡಬೇಕು ಎಂಬ ಧಾವಂತದಲ್ಲಿ ಮುನ್ನುಗ್ಗಿ ನಿರಾಸೆಯಾಗುತ್ತಾರೆ. ಆದ್ದರಿಂದ ಸರಿಯಾದ ಗುರುಗಳಲ್ಲಿ ಅಭ್ಯಾಸ ಮಾಡಿ ಶ್ರದ್ಧೆಯಿಂದ ಕಲಿತರೆ ಸಂಗೀತ ಒಲಿಯುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದರು.
ಭಾವಗಾನ ತಂಡದ ಅಧ್ಯಕ್ಷ ಬಿ.ಭುಜಂಗಪ್ಪ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ಕನ್ನಡ ಗೀತೆಗಳು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕರ್ನಾಟಕದಲ್ಲಿ ವಾಸವಿರುವ ಪ್ರತಿಯೊಬ್ಬನ ಕರ್ತವ್ಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಚಾಲಕ ಪ್ರಶಾಂತ್ ಹದಡಿ ಮಾತನಾಡಿ, ಕಾರ್ಯಕ್ರಮಗಳ ಆಯೋಜನೆಯಿಂದ ಪರಿಪಕ್ವತೆ ಸಾಧಿಸುವುದರ ಜೊತೆಗೆ ಪರಸ್ಪರ ಒಡನಾಟ ಹಚ್ಚಿ ನಕಾರಾತ್ಮಕ ಭಾವನೆಗಳು ದೂರವಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಹೇಮಂತ್, ಮಮತಾ ಪರಶುರಾಮ್, ನವೀನ್, ಬಸವರಾಜ್, ಪ್ರಮೋದ್, ರಾಜಶೇಖರ್ ಕಾಮತ್ ಹಾಗೂ ನೂರಾರು ಜನ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ತಂಡದ ಹಿರಿಯ ಗಾಯಕಿಯರಿಗೆ ಸನ್ಮಾನಿಸಲಾಯಿತು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ